ಭಾವಲೋಕದಿಂದ ಭವ್ಯಲೋಕಕ್ಕೆ



ದಿನವೊಂದನ್ನು ಬಿಟ್ಟು ಮತ್ತೆ ಇನ್ನೊಂದು ಬರವಣಿಗೆ. ಕಂಪ್ಯೂಟರ್ ಆಸನವ ತೊರೆಯದೇ ಕೊರೆಯುವ ನನಗೆ, ಇನ್ನು ಬಾಗಿಲ ದಾಟಿ ಜನ ಜಾತ್ರೆ ವಿಚಾರ ಕಣ್ಣಲ್ಲಿ ಸೂರೆಗೊಂಡಾಗ ಬಿಡುವೆನೆ? ಇಲ್ಲ. ಕೆಲವೊಮ್ಮೆ ಇಲ್ಲಿ ಗೀಚಿ ಆ ಯೋಚನೆ ನೀಗುವುದು ಯಾವುದೋ ಕಾಲದ ರೂಡಿಯಾಗಿತ್ತು ನಂತರ ಕೈಬಿಟ್ಟಿತು. ಆದರೂ ಕೆಲವೊಮ್ಮೆ ಇನ್ನೆರಡು ಜೀವಕೆ ಹೇಳಿ ಹಂಚಿಯಾದರಾಯಿತು ಅನ್ನೋ ಯೋಚನೆಗೆ ಬೀಳುತ್ತೇನೆ. ವಿಷಯದ ಗಾಂಭೀರ್ಯ, ಉತ್ಸಾಹ, ಆಶ್ಚರ್ಯ ಇನ್ಯಾವುದೋ ಒಂದು ಕಾರಣದಿಂದಾಗಿ.

ಏನೋ ಓದಿ, ಏನೋ ಕಲಿತು, ಇನ್ನೇನನ್ನೋ ತಾಲೀಮು ಮಾಡಿ, ಮತ್ಯಾವುದಕ್ಕೋ ತಲೆಕೆಡಸಿಕೊಂಡು, ಕಸಿವಿಸಿಯಲ್ಲಿ ಒದ್ದಾಡುವುದು ಗೇಣು ಬಟ್ಟೆಗೂ, ನನ್ನ ಹೊಟ್ಟೆಗೋ, ಅನಿವಾರ್ಯವೊ ಗೊತ್ತಿಲ್ಲ. ಸಮಯವಾದಾಗ ಪುಸ್ತಕ, ನಾನೇ ಸಮಯಮಾಡಿಕೊಂಡಾಗ ಸಿನೆಮಾ, ಇನ್ನುಳಿದ ಗಳಿಗೆಗೆ ಗಮನಾರ್ಹ ಕೆಲಸ (ಉಹಾಪೋಹಾದ ಮಾಲೆಗೆ ಮತ್ತೊಂದು ಹೂವಿನ ಸೇರ್ಪಡೆ) ಮಾಡಿಕೊಂಡಿರುತ್ತೇನೆ. ಅಂತದೇ ವಿನಿಯೋಗವಾದ ದಿನವಾಗಿತ್ತು ನನಗೆ ಈ ಗುರವಾರ.

ದಷ್ಟ ಪುಷ್ಟ ಕರಾಳ ಕಗ್ಗತ್ತಲ ಕಾಡಿನ, ನಿಗೂಢ ವಾಸಿಯಾದ ಸಿದ್ದರುಗಳ ದಿನಚರಿಯಂತೆ, ಮುಂಜಾವಿನ ಸೂರ್ಯನ ಕಿರಣಗಳಿಗೆ ನಮನ ಹೇಳಿ ನಿದ್ದೆಗೆ ಹೋಗುವುದು. ಮತ್ತದೇ ಸೂರ್ಯ ನೆತ್ತಿಯಮೇಲೆ ಬಂದಾಗ ನಮಗೆ ಸೂರ್ಯೋದಯ. ತದನಂತರ ತಿಂಡಿ ವ್ಯವಸ್ಥೆ ಮತ್ತು ಮುಂತಾದವು (ವಿವರಿಸುವ ಅವಶ್ಯಕೆತೆ ಕಾಣಲಿಲ್ಲ). ಈ ರೀತಿ ವೃತ್ತಿ ಇಲ್ಲದಿದ್ದರೂ ಸ್ವಯಂ ರೂಪಿಸಿಕೊಂಡಿರುವ ಗುರಿ ಇದೆ. ನಿಧಾನ ಗತಿಯಲ್ಲಿ ಅದರತ್ತ ಸಾಗುತ್ತಿದೇನೆ. ಇದು ನನ್ನ ಸಮಾಚಾರ ಗತಿ, ಇಂದಿನ ದಿನಗಳ ಪರಿ.

ಹೀಗೆ ನನ್ನ ಸ್ನೇಹಿತನೊಬ್ಬ ಕಿರೀಕ್ ಪಾರ್ಟಿ ಚಿತ್ರ ನೋಡಬೇಕು ಎಂದು ಹಂಬಲಿಸಿ, ಜೊತೆಕೂಡಿ ನೋಡುವುದಕ್ಕೆ ಬೆಂಬಲಿಸಿ ನನಗೆ ತನ್ನ ಆಕಾಂಕ್ಷೆ ರವಾನಿಸಿದ. ನಾನು.. (ಇಲ್ಲಿಂದ ನನ್ನ ಮಾತಿನಂತೆ, ಬರಿ ಗುರು ನೀನು!) "ಅಯ್ಯೋ! ಬಾರಯ್ಯ, ಚಲನ ಚಿತ್ರತಾನೆ, ಹೋಗೋಣ ಅಂದೆ." ಸುಮಾರು ೨. ೩೦ ಗಂಟೆಗೆ ಸಿನಿಮಾ ಥಿಯೇಟರ್ ಹತ್ರ ಹೋಗಿ ನೋಡ್ದ್ದ್ರೆ ಅದೇನು ಸ್ವಾಮಿ ಜನ ಅಬ್ಬಾ ಅಬ್ಬಾ. ಇಂಜಿನಿಯರಿಂಗ್ ಬಿಡಿ, ಟೈಪಿಸ್ಟ್ ಕ್ಲಾಸ್ ಫ್ರೆಂಡ್ಸ್ ಕೂಡ ಇದಾರೆ. ಎಲ್ಲಾ ಕಡೆ 'ಚಿತ್ರ ಮಂದಿರ ತುಂಬಿದೆ' ಅಂತ ಬೋರ್ಡು. ಸಮಯ ೪ ಗಂಟೆಗೆ ಇನ್ನೊಂದು ಥಿಯೇಟರ್ ಹತ್ರ ಬಂದು ನೋಡ್ಧ್ವಿ, ಅಲ್ಲೂ ಅದೇ. ಬಡ್ಡಿ ಮಗಂದು ಥಿಯೇಟರ್ ಸುತ್ತಿ ಸಾಕಾಯ್ತು. ಭರ್ಜರಿ ಪ್ರದರ್ಶನ. ಒಳ್ಳೆಯದಾಗಲಿ. ಆದರೂ ಕೊನೆಗೂ ಸ್ನೇಹಿತನ ಆಸೆ ಫಲಿಸಲಿಲ್ಲ. ವ್ಯರ್ಥ. ಹೊಗೆ.

ಕೊನೆಗೆ ನಮ್ಮ ರಮೇಶ್ ಅರವಿಂದ್ ರವರ ಪುಷ್ಪಕ ವಿಮಾನ ಸಿನೇಮಾ ನೋಡೋದು ಅಂತ ಡಿಸೈಡ್ ಆಯ್ತು. ಆದ್ರೆ ಟ್ವಿಸ್ಟ್ ಏನಪ್ಪಾ ಅಂದ್ರೆ, ನಾವು ಹೋಗಿದ್ದ ಥಿಯೇಟರ್ ಇಂದ ಅದು ಹಾರೋಗಿತ್ತು. ಅಲ್ಲಿಗೆ ಅಲ್ಲಮ ಪ್ರಭುಗಳು ಬಂದ್ರು. ಇನ್ನೇನ್ ಮಾಡೋದು, ಅದಕ್ಕೆ ಹೋದ್ವಿ. ನಾಗಾಭರಣ ಅವರ ಮೇಲಿರೋ ಭರವಸೆ, ನಂಬಿಕೆ ಮತ್ತೆ ಒಲವು. ಸರಿ, ಬಾ ಗುರು ನೋಡೇ ಬಿಡೋಣ ಅಂತ ಹೋದ್ವಿ. ನಾವು ಹೋಗಿದ್ದ ಥಿಯೇಟರ್ ಅಲ್ಲಿ ಸಿನೆಮಾ ನೋಡಿದ ಹುಡುಗ್ರು ಈಗ ಸಿನೆಮಾ ನಿರ್ದೇಶಕರಾಗಿದ್ದಾರೆ ಆದ್ರೂ ಆ ಬಡಪಾಯಿ ಸೀಟ್ಗಳು ಬದಲಾಗಿಲ್ಲ.


ಇವಾಗ ಸಿನೆಮಾ ವಿಶ್ಲೇಷಣೆ...(ಪ್ರಾರಂಭ)



ನಾಗಮಂಡಲ ಮತ್ತು ಕಲ್ಲರಳಿ ಹೂವಾಗಿ, ಹೀಗೆ ಯಾವುದೋ ಕಾಲದ ಅಥವಾ ಒಂದು ಪ್ರಾದೇಶಿಕ ಕಥಾವಸ್ತುವಿಗೆ ಜೇವ ತುಂಬಲರ್ಹ ನಿರ್ದೇಶಕ ಟಿ. ಎಸ್ . ನಾಗಾಭರಣರವರ ಚಿತ್ರವಿದು. ಅಲ್ಲಮರ ಜೀವನದ ಸಾರಾಂಶದ ವಿವರಣೆ ಈ ಚಿತ್ರವಾಗಿದೆ. ನಿರ್ದೇಶಕ ಗುರುಪ್ರಸಾದ್ ರವರು ಪರಿಚಯಿಸಿದ ಧನಂಜಯ ಅಲ್ಲಮನಾಗಿ ನಟಿಸಿದ್ದು, ಅವರೊಂದಿಗೆ ಮೇಘನಾ ರಾಜ್ ಮತ್ತು ಪ್ರತಿಭಾವಂತ ನಟ ಸಂಚಾರಿ ವಿಜಯ ಬಸವಣ್ಣನಾಗಿ ತೆರೆಯಮೇಲೆ ಬರುತ್ತಾರೆ. ಬಾಲ್ಯದ ಬೆಳವಣಿಗೆ, ಲಯದ ಬಗ್ಗೆ ಅವರಿಗಿರುವ ಅರಿವು ಮತ್ತು ನಿಪುಣತೆಯ ಹಲವು ದೃಶ್ಯಗಳು. ನಂತರ, ಜ್ಙಾಸಂಪಾದನೆ ಸಲುವಾಗಿ ಗುರುಗಳ ಛಾಯೆ ಪ್ರತಿಪಾದಿಸಿ ಗುರುಕುಲ ಸೇರುವ ಅಲ್ಲಮರ ಇನ್ನೊಂದು ಅಧ್ಯಾಯ.


ಬೆಳದು ದೊಡ್ಡವನಾದ ಅಲ್ಲಮ ಹೇಗೆ ವಿವೇಕಿಯೂ, ಜ್ಞಾನಿಯೂ ಆಗಿ ಯಾವುದೊ ಒಂದು ಘಟನೆಯಿಂದ ಗುರುಕುಲ ಬಿಟ್ಟು ಹೊರಬರಬೇಕಾಗುತ್ತೆ. ವಿದ್ಯಾಶ್ರಮ ತೊರೆದ ಅಲ್ಲಮ ಸಮಾಜದ ಮತ್ತಿತರ ಕಲ್ಯಾಣ ಸ್ಥಳವಾದ ದೇಗುಲಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ಮೃದಂಗ ನುಡಿಸುವ ಭಂಗಿ ಮತ್ತು ವೇಗ ಮತ್ತು ದೀರ್ಘಾಯುವಿನ ದೆಸೆಯಿಂದ ದೇಗುಲದಲ್ಲಿ ನಾಟ್ಯವಾಡುತಿದ್ದ ನರ್ತಕಿಯು ಸೋತು ತತ್ತರಿಸುತ್ತಾಳೆ. ನಂತರ, ಆಕೆಗೆ ಇವನ ಮೇಲೆ ಒಂದು ಸೆಳೆತ. ತಾನು ತನ್ನ ಸೌಂದರ್ಯದಿಂದ ಅಲ್ಲಮನನ್ನು ಓಲೈಸುವ ಯತ್ನ ನಡೆಯುತ್ತೆ. ಹೀಗೆ ಗುರುಕುಲದ ಜ್ಞಾನದ ಬಾಗಿಲು ಮುಚ್ಚಿ, ಹೆಣ್ಣಿನ ಮೋಹ ಮಾಯೆಗಳ ಸರಪಳಿಯ ನಡುವೆ ಹೇಗೆ ಅಲ್ಲಮರು ಜ್ಞಾನೋದಯ ಪಡೆದುಕೊಳ್ಳುತ್ತಾರೆ ಎಂಬುದೇ ಚಿತ್ರದ ಸಾರಾಂಶ.


ಚಿತ್ರದ ಅತಿ ಮುಖ್ಯವಾದ ಅಂಶವೆಂದರೆ ಸಂಗೀತ. ದೃಶ್ಯಕ್ಕೆ ಅನುಗುಣವಾಗಿ ಇಂಪಾದ ಮೌಲ್ಯ ಸಾಲುಗಳು ಸಂಗೀತವಾಗುತ್ತದೆ. ಎಲ್ಲಾ ಚಿತ್ರಣವನ್ನು ಅತಿ ಅದ್ಭುತವಾಗಿ ಸೆರೆಹಿಡಿದಿರುವ ಛಾಯಾಗ್ರಾಹಕರಿಗೆ ಅಭಿನಂದನೆಗಳು. ಇನ್ನು ಮನೆ ಅಂಗಳದ ವಿನ್ಯಾಸ, ವಸ್ತ್ರಾಲಂಕಾರ ಎಲ್ಲವವೂ ಸೂಕ್ತವಾಗಿದೆ ಮತ್ತು ಸುಂದರವಾಗಿದೆ. ಇವೆಲ್ಲವನ್ನೂ ಇಂಪಡಿಸಿದ ಶ್ರಮಕ್ಕೆ ಸಮನಾಗಿ ಎಲ್ಲಾ ತಾರಾಂಗಣ ಗಮನಾರ್ಹ ನೃತ್ಯ-ನಟನೆ ಮಾಡಿದೆ. ಎಲ್ಲಾ ದೃಶವೂ ಪೂರ್ಣವಾಗಿದೆ.


ಪ್ರಸ್ತುತ ಕಲಾಭಿಮಾನಿಯ ಕಥಾ ಬಯಕೆ ಸಮ್ಮತಿಸುವ ಕಥೆ ಇದಾಗದಿದ್ದರೂ, ಅವಕಾಶ ಸಿಕ್ಕಿ ನೋಡುವವನಿಗೆ ಒಂದು ಅದ್ಭುತ ಚಿತ್ರ. ಈ ರೀತಿಯ ಚಿತ್ರ ಮಾಡುವುದು ಬಹಳ ಕಷ್ಟ. ಎಷ್ಟೋ ಬೈಗುಳ ನಿಂದನೆಗೆ ತುತ್ತಾಗುವ ಸ್ಥಿತಿ ತರುವ ವಿಷಯಗಳು. ಚರಿತ್ರ್ಯ ಹಿಡಿದಿರುವ ಎಷ್ಟೋ ಸಣ್ಣ ವಿವರಗಳು ಹಲವಾರು ಕಾರಣಗಳಿಂದ ಹುಸಿಯಾಗಿರುತ್ತೆ. ಈಗಾಗಲೇ ಯುಟ್ಯೂಬ್ ಅಲ್ಲಿ ಚಿತ್ರದ ಕೆಲವು ದ್ರಶ್ಯಗಳಲ್ಲಿ ಕಂಡುಬಂದ ಸುಮಾರು ೧೦ ಅಸಮಾಧಾನ ತಂದಿರುವ ವಿಷಯಗಳನ್ನು ಪ್ರಸ್ತುತಪಡಿಸಿದ್ದಾರೆ. ಹೀಗೆ, ಒಂದು ಬಗೆ ಇರುಸು ಮುರುಸು ಅನುಭಾವವಿಸಬೇಕಾಗುತ್ತೆ.


ಇದು ಒಂದು ಉತ್ತಮ ಚಿತ್ರ.

ಸಮಯವಾದರೆ ನೋಡಿ.

ಇಲ್ಲವಾದರೆ ಹಾಡು ಕೇಳಿ.


ಧನ್ಯವಾದಗಳು


ಛಾಯಾನಂದ ನಾಗೇಶ್ 27.01.2017

Share this:

ABOUT THE AUTHOR

UX Designer